ತಿರುವಂತನಪುರ ಅನಂತ ಪದ್ಮನಾಭ ದೇಗುಲ ನೆಲಮಾಳಿಗೆಯ ‘ಬಿ’ ಕೊಠಡಿ ದ್ವಾರ ತೆಗೆಯಬೇಕೆ ಬೇಡವೇ ಎಂಬುದು ನಾಳೆ ಅಂದರೆ ಸೆಪ್ಟೆಂಬರ್ 2 ರಂದು ನಿರ್ಧರಿತವಾಗುತ್ತದೆ. ಈ ಸಂಬಂಧ ರಾಜಮನೆತನ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಮ್ ಕೋರ್ಟ್ ತೀರ್ಪು ನೀಡಲಿದೆ. ಇದನ್ನು ಆಧರಿಸಿ ಕೋರ್ಟ್ ನೇಮಿಸಿರುವ ದ್ವಿ ಸಮಿತಿ ಮುಂದೆ ತೆಗೆದುಕೊಳ್ಳಬೇಕಾದ ಸ್ವರೂಪದ ಬಗ್ಗೆ ನಿರ್ಧರಿಸಲಿದೆ. ಆದರೆ ಕೋರ್ಟಿಗೆ ರಾಜಮನೆತನ ಸಲ್ಲಿಸಿರುವ ಅರ್ಜಿ ತಿರುಳು ಎಷ್ಟು ಸತ್ಯಾಂಶದಿಂದ ಕೂಡಿದೆ. ’ಬಿ’ ಕೊಠಡಿ ತೆರೆದರೆ ನಿಜಕ್ಕೂ ಕೆಡಕುಂಟಾಗುತ್ತದೆಯೆ, ದೈವಜ್ಞರ ಅಭಿಪ್ರಾಯ ತಿರುಚಲಾಗಿದೆಯೆ. ರಾಜಮನೆತನದ ಹಿರಿಯ ಮಾರ್ತಂಡವರ್ಮ ದೇಗುಲದ ಆಭರಣಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದಾರೆಯೆ ….? ಈ ವಿದ್ಯಮಾನಗಳ ಸುತ್ತ ಅನುಮಾನಗಳ ಹುತ್ತ ಬೃಹದಾಕಾರವಾಗಿ ಬೆಳೆಯುತ್ತಿದೆ…!
ಅನಂತ ಪದ್ಮನಾಭ ದೇಗುಲಕ್ಕೆ ಸಾವಿರಾರು ವರ್ಷಗಳ ಇತಿಹಾಸ. ಅಂದಿನಿಂದಲೂ ದೇಗುಲದಲ್ಲಿ ಅಂದಿನಿಂದಲೂ ದೇವಾಲಯದಲ್ಲಿ ಮುತ್ತು-ರತ್ನ-ವಜ್ರ-ವೈಢೂರ್ಯ-ಚಿನ್ನ-ಬೆಳ್ಳಿ ಸಂಗ್ರಹಣೆಯಾಗಿದೆ. ಊಹೆಗೂ ಮೀರಿದ ಸಂಪತ್ತಿನ ಜಮಾವಣೆಯಾಗಿದೆ. ಸಂಪೂರ್ಣ ಚಿನ್ನದಿಂದಲೇ ಮಾಡಿದ ಬೃಹದಾಕಾರದ ವಿಗ್ರಹ-ಆಭರಣಗಳ ವಿವರ ತಿಳಿದರೆ ಅಚ್ಚರಿ ಬೆರೆತ ದಿಗ್ಭ್ರಮೆಯಾಗುತ್ತದೆ. ಇಂಥ ಆಸ್ತಿ ಅನ್ಯರ ಪಾಳಿಗೆ ಸುಲಭದ ತುತ್ತಾಗದಂತೆ ‘ ಎತ್ತರ ಯೋಗಂ’ ಹದ್ದಿನ ಕಣ್ಣಿನಂತೆ ದೃಷ್ಟಿಯಿಟ್ಟು ಕಾಪಾಡುತ್ತಿತ್ತು. ಈ ಸಮಿತಿಗೆ ವಿರುದ್ಧವಾಗಿ ರಾಜ ಮಾರ್ತಂಡ ವರ್ಮ ದೇಗುಲವನ್ನು ‘ರಾಜ ಪ್ರಭುತ್ವದ ವಶ’ ಅಸಮಾಧಾನದ ಭುಗಿಲ್ಲೆದಿತ್ತು. ಮುಂದೆ ಈ ರಾಜನೆ ಪದ್ಮನಾಭನಿಗೆ ಸಕಲವನ್ನು ಸಮರ್ಪಿಸಿ ದಾಸನಾಗಿ ಅಧಿಕಾರ ನಡೆಸಿದ. ಇದರ ವಿವರಗಳೆಲ್ಲವೂ ಹಿಂದಿನ ಲೇಖನಗಳಲ್ಲಿವೆ.
![]() |
ನಿವೃತ್ತ ಐಪಿಎಸ್ ಅಧಿಕಾರಿ ಸುಂದರ್ ರಾಜನ್ |
ಅತ್ಯಮೂಲ್ಯ
ಸಂಪತ್ತುಳ್ಳ ಭಂಡಾರದ ವಿವರ ಹೊರ ಪ್ರಪಂಚಕ್ಕೆ ತಿಳಿಯುವಂತೆ ಮಾಡಿದ್ದು ನಿವೃತ್ತ ಐ.ಪಿ.ಎಸ್. ಅಧಿಕಾರಿ ಸುಂದರ ರಾಜನ್. ಇವರ ಕುಟುಂಬ ಕೂಡ ದೇಗುಲ ಮತ್ತು ರಾಜ ಮನೆತನಕ್ಕೆ ನಿಕಟವರ್ತಿಯಾಗಿತ್ತು ಎಂಬುದು ಬಹಳ ಗಮನಾರ್ಹ.
ಅಪಾರ ಧಾರ್ಮಿಕ ನಂಬಿಕೆಯ ಕುಟುಂಬದ ವ್ಯಕ್ತಿಯೇಕೆ ಅನಂತ ಪದ್ಮನಾಭ ದೇಗುಲ ಮತ್ತು ಅದರ ಸಂಪತ್ತು ಸರಕಾರದ ಪರಿಧಿಗೆ ಒಳಪಡಬೇಕು ಎಂದು ಬಯಸಿದರು…? ದೇಗುಲದ ಐಶ್ವರ್ಯಕ್ಕೆ ಸಂಬಂಧಿಸಿ ಅವ್ಯವಹಾರಗಳಾಗುತ್ತಿದ್ದವೆ…? ಸಂಪತ್ತಿನ ಸೋರಿಕೆಯಾಗುತ್ತಿತ್ತೆ….? ಈ ಅನುಮಾನ ಬಗೆಹರಿಸಲು ಸುಂದರ ರಾಜನ್ ಇಲ್ಲ. 2011ರ ಜುಲೈ 17 ರಂದು ಮೃತರಾಗಿದ್ದಾರೆ. ಈ ಬಳಿಕ ಅಂದರೆ ಆಗಸ್ಟ್ 19 ರಂದು ಕೇರಳದ ಮಾಜಿ ಮುಖ್ಯಮಂತ್ರಿ ಕೇರಳ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದ್ ಅವರು ಟ್ರಾವೆಂಕೂರು ರಾಜವಂಶದ ಈಗಿನ ಮುಖ್ಯಸ್ಥ ಮಾರ್ತಂಡ ವರ್ಮ ಅವರ ಮೇಲೆ ವಾಗ್ದಾಳಿ ನಡೆಸಿದರು.
![]() |
ಕೇರಳ ಮಾಜಿ ಮುಖ್ಯಮಂತ್ರಿ ಅಚ್ಚುತಾನಂದನ್ |
‘
ಮಾರ್ತಂಡ ವರ್ಮ ಅಪಾರ ಬೆಲೆ ಬಾಳುವ ದೇಗುಲದ ಆಭರಣಗಳನ್ನು ಸ್ಮಗಲಿಂಗ್ ಮಾಡುತ್ತಿದ್ದಾರೆ. ಈತ ಪ್ರತಿದಿನ ಅನಂತ ಪದ್ಮನಾಭ ದೇಗುಲಕ್ಕೆ ಹೋಗುವುದೇಕೆ ಎಂಬುದು ನಿಮಗೆ ಗೊತ್ತಿಲ್ಲ. ಈತ ಹಿಂದಿರುಗುವಾಗ ಜೊತೆಯಲ್ಲಿ ಸಾಗುವ ಟಿಫಿನ್ ಕ್ಯಾರಿಯರ್ ನಲ್ಲಿ ಹೋಗುವುದು ದೇವರಿಗೆ ಅರ್ಪಿಸಿದ ನೈವೇದ್ಯ ಪಾಯಸಮ್ ಎಂದು ಭಾವಿಸಲಾಗಿದೆ. ಆದರೆ ನಿಜಕ್ಕೂ ಅದರಲ್ಲಿ ಸಾಗಾಣಿಕೆಯಾಗುವುದು ಆಭರಣಗಳು’ ಎಂದು ಆರೋಪಿಸಿದರು.
![]() |
ದೇಗುಲದ ಆಚರಣೆಯೊಂದರ ಸಂದರ್ಭ ಮಾರ್ತಂಡವರ್ಮ |
ದೇಗುಲದ
ಸಂಪತ್ತಿಗೆ ಸಂಬಂಧಿಸಿದಂತೆ ಅವ್ಯವಹಾರಗಳಾಗುತ್ತಿದೆ ಎಂಬ ವಿವರವನ್ನು ಈ ದೇಗುಲದ ನಿವೃತ್ತ ಅರ್ಚಕರೊಬ್ಬರು ನೀಡಿದ್ದಾರೆ. ಅವರ ಜೀವವೂ ಈಗ ಅಪಾಯದಲ್ಲಿದೆ. ನೆಲ ಮಾಳಿಗೆಯ ‘ಬಿ’ ಕೊಠಡಿ ತೆರೆದರೆ ಅಪಾಯಗಳಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದರ ಬಾಗಿಲನ್ನು ಮಾರ್ತಂಡವರ್ಮ ತೆಗೆದಾಗಲೆಲ್ಲ ಏಕೆ ಏನೂ ಅಪಾಯವಾಗಿಲ್ಲ’ ಇದು ವಿ.ಎಸ್. ಎ. ಪ್ರಶ್ನೆ. ನೆಲಮಾಳಿಗೆಯ ಬಾಗಿಲುಗಳು ತೆರೆದು ಅಲ್ಲಿಯ ವಿವರಗಳು ದಾಖಲೀಕರಣವಾಗಬೇಕು ಎಂದು ನ್ಯಾಯಾಲಯ ಹೇಳಿತ್ತು. ಈ ಬಳಿಕ ದೇವಪ್ರಶ್ನೆಯನ್ನಿಡಿಸಿದ್ದು ನ್ಯಾಯಾಲಯ ತೀರ್ಮಾನದ ಮೇಲೆ ಸವಾರಿ ಮಾಡಿದಂತಾಗಿದೆ’ ಇಲ್ಲ-ಸಲ್ಲದ ವದಂತಿಗಳನ್ನು ರಾಜಮನೆತನದವರು ಹರಡುತ್ತಿದ್ದಾರೆ ಎನ್ನುತ್ತಾರೆ.
‘
ದೇಗುಲದ ಚೈತನ್ಯಕ್ಕೂ ‘ಬಿ’ ಕೊಠಡಿಗೂ ನೇರ ಸಂಬಂಧವಿದೆ. ಈಗಾಗಲೇ ‘ಎ’ ಕೊಠಡಿ ತರೆದಿರುವುದರಿಂದ ಕೆಡಕುಂಟಾಗಿದೆ. ಇನ್ನೂ ‘ಬಿ’ಕೊಠಡಿ ತೆರೆದರೆ ಈ ಕೆಡಕು ಇನ್ನೂ ಹೆಚ್ಚುತ್ತದೆ. ಕೊಠಡಿಗಳಲ್ಲಿರುವ ಸಂಪತ್ತಿನ ಪೋಟೋ ತೆಗೆಯುವುದು ಮತ್ತು ವಿಡಿಯೋಗ್ರಾಫ್ ಮಾಡಿಸುವುದು ಅಪಚಾರ. ರಾಷ್ಟ್ರ ಮತ್ತು ಆಡಳಿತದ ಮೇಲೆ ದುಷ್ಪರಿಣಾಮ ಉಂಟಾಗುವ ಭೀತಿಯಿದೆ. ದೇಗುಲದ ಆಡಳಿತ ನಡೆಸುವ ಕುಟುಂಬದಲ್ಲಿ ಸಾವು ಉಂಟಾಗಬಹುದು ಎಂದು ದೇವಪ್ರಶ್ನೆಯಿಂದ ಗೊತ್ತಾಗಿದೆ. ಆದ್ದರಿಂದ ಇದಕ್ಕೆಲ್ಲ ಅವಕಾಶವಾಗದಂತೆ ತಡೆ ನೀಡಬೇಕು’ ಹೀಗೆಂದು ತಿರುಳಿರುವ ಅರ್ಜಿಯನ್ನು ಟ್ರಾವೆಂಕೂರು ರಾಜಮನೆತನದ ರಾಮವರ್ಮ ಸುಪ್ರೀಮ್ ಕೋರ್ಟಿಗೆ ಸಲ್ಲಿಸಿದರು. ನಾಳೆ ಇದೇ ಅರ್ಜಿ ವಿಚಾರಣೆ.
‘ಅನಂತ ಪದ್ಮನಾಭ ದೇಗುಲದಲ್ಲಿ ದೇವಪ್ರಶ್ನೆ ಅಥವಾ ಅಷ್ಟಮಂಗಲ ಪ್ರಶ್ನೆ ನಡೆಸಿಕೊಡಲು ನಾನೂ ಸೇರಿ ಹತ್ತು ಮಂದಿ ದೈವಜ್ಞರು ನಿಯೋಜಿತವಾಗಿದ್ದೆವು. ಈ ಆಚರಣೆ ನಡೆಯುವಾಗ ವೀಕ್ಷಿಸಲು ಸುಮಾರು ನೂರು ಮಂದಿ ಇದ್ದ ವಿದ್ವಾಂಸರು ನೆರೆದಿದ್ದರು. ದೈವಜ್ಞರಾದ ನಾವುಗಳು ಇವರ ಪರಿಚಯ ಮಾಡಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಇಲ್ಲ-ಸಲ್ಲದ ವಿಚಾರ ಉಂಟಾಗಬಹುದು ಎಂಬುದು ಇದಕ್ಕೆ ಕಾರಣ. ದೇವಪ್ರಶ್ನೆ ಇಡಿಸಿರುವುದು ತುಂಬ ತಡವಾಗಿದೆ ಎಂದೇ ದೈವಜ್ಞರು ಹೇಳಿದೆವು. ದೇಗುಲದ ನಡವಳಿಗೆ ಸಂಬಂಧಿಸಿ ವ್ಯತ್ಯಯಗಳುಂಟಾಗಿದೆ. ಇದರ ದೋಷ ನಿವಾರಣೆಗೆ ವಿಶೇಷ ಪೂಜೆ ನಡೆಸಬೇಕು ಎಂದು ಹೇಳಿ ಅದರ ವಿವರಗಳನ್ನು ನೀಡಿದೆವು. ದೇವಪ್ರಶ್ನೆ ಇಡೀ ದೇಗುಲಕ್ಕೆ ಸಂಬಂಧಿಸಿದ್ದಾಗಿತ್ತು.’ ಬಿ’ ತೆರೆಯುವ ವಿಚಾರ ಇದರಲ್ಲಿ ಬಂತಷ್ಟೆ. ಆದರೆ ಇದೇ ಮುಖ್ಯ ವಿಚಾರವಾಗಿರಲಿಲ್ಲ. ನೆಲಮಾಳಿಗೆಯಲ್ಲಿರುವುದು ದೇವರ ಅಂತರಂಗದ ಸ್ವತ್ತು. ಇದರ ವಿವರ ನೋಡುವಾಗ ಸೂಕ್ತ ವಿಧಿವಿಧಾನ ಅನುಸರಿಸಿಲ್ಲ’ ಇದು ದೈವಜ್ಞ ಮಧೂರು ನಾರಾಯಣ ರಂಗ ಭಟ್ಟರು ಆಗಸ್ಟ್ 22ರಂದು ಅವರ ನಿವಾಸದಲ್ಲಿ ನನ್ನೊಂದಿಗೆ ಹೇಳಿದ ವಿವರ.
![]() |
ದೈವಜ್ಞ ಮಧೂರು ನಾರಾಯಣ ರಂಗ ಭಟ್ಟರು |
‘ಬಿ’ ಕೊಠಡಿ ತೆರೆಯಲೇಬಾರದು ಎಂದು ದೈವಜ್ಞರ ತಂಡ ಹೇಳಿಲ್ಲ. ಜೊತೆಗೆ ಉಳಿದ ಕೊಠಡಿಗಳನ್ನು ತೆರೆಯಬಾರದಿತ್ತು ಎಂದು ತಿಳಿಸಿಲ್ಲ. ಬದಲಾಗಿ ದೈವದ ಅಂತರಂಗದ ವಿವರ ನೋಡುವಾಗ ಸರಿಯಾದ ವಿಧಿವಿಧಾನಗಳನ್ನು ಏರ್ಪಡಿಸಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು ಎನ್ನುವುದು ಅರ್ಥವಾಗುತ್ತದೆ.
ದೇವಪ್ರಶ್ನೆ
ನಡೆಸಿಕೊಡಲು ನಾನು ತಿರುವಂತನಪುರದಲ್ಲಿ ಇದ್ದಷ್ಟು ದಿನವೂ ದೇಗುಲದ ಆಡಳಿತಸ್ಥರು
(ರಾಜಮನೆತನ) ನೇಮಿಸಿದ ಇಬ್ಬರು ದೃಢಕಾಯರಾದ ಭದ್ರತಾ ಸಿಬ್ಬಂದಿ ಸದಾ
ಬೆನ್ನುಗಿರುತ್ತಿದ್ದರು. ಇನ್ನೂ ಒಂಭತ್ತು ಮಂದಿ ದೈವಜ್ಞರ ಹಿಂದೆಯೂ ಇಬ್ಬಿಬ್ಬರು ಸಿಬ್ಬಂದಿ ಇದ್ದರು' ಹೀಗೆಂದರು ನಾರಾಯಣ ರಂಗ ಭಟ್ಟರು. ದೈವಜ್ಞರ ಹಿಂದೆ ಈ ರೀತಿ ಬೆಂಗಾವಲು ಪಡೆ ಇರಿಸುವ ಅವಶ್ಯಕತೆಯಾದರೂ ಏನಿತ್ತು. ರಾಜಮನೆತನಕ್ಕಿದ್ದ
ಅಳುಕೇನು...?
![]() |
ದೈವಜ್ಞರ
ಹಿಂದೆ ಕಟ್ಟುಮಸ್ತಾದ ಭದ್ರತಾ ಸಿಬ್ಬಂದಿ ನಿಂತಿರುವುದನ್ನು ಗಮನಿಸಿ. ಸೊಂಟಕ್ಕೆ ಕೇಸರಿ ಸಮವಸ್ತ್ರ ಸುತ್ತಿಕೊಂಡು, ಕುತ್ತಿಗೆಗೆ
ಐಡೆಂಟಿಟಿ ಕಾರ್ಡ್ ಹಾಕಿಕೊಂಡಿರುವಾತ ಸಹ ದೇಗುಲದ
ಖಾಸಗಿ ಭದ್ರತಾ ಪಡೆ ನೌಕರ.
|
ಟ್ರಾವೆಂಕೂರು ರಾಜಮನೆತನ ‘ಅಪಾಯ’ ಎಂದು ಹೇಳುತ್ತಿರುವುದೇಕೆ…? ನಾಳೆ ಸುಪ್ರೀಮ್ ಕೋರ್ಟ್ ಏನು ತೀರ್ಮಾನ ತೆಗೆದುಕೊಳ್ಳಬಹುದು…?
ಕುಮಾರ್ ನಿಮ್ಮ ಸಂಗ್ರಹ ತುಂಬಾ ಚೆನ್ನಾಗಿದೆ. ಫಾಲೋ ಅಪ್ ಸ್ಟೋರಿ ಬರೆಯುತ್ತಿದ್ದಿರಾ. ಇದು ನನ್ನಲ್ಲೂ ದಾಖಲಾಗುತ್ತಿದೆ. ಹೀಗೆ ಮುಂದುವರೆಸಿ ಸರ್,. ಶುಭವಾಗಲಿ.
ReplyDeleteಮಾಹಿತಿಗೆ ಧನ್ಯವಾದಗಳು ಸರ್, ಲೇಖನಗಳ ಸರಣಿ ಚೆನ್ನಾಗಿ ಮೂಡಿಬರುತ್ತಿದೆ.
ReplyDeleteದೈವಜ್ಞರ ಮೇಲೆ ರಾಜ ಕುಟುಂಬದ ಒತ್ತಡವೇನಾದರೂ ಇತ್ತೆ?